ಗತ ಕಾಲದಲ್ಲಿ ನಡೆದು ಹೋಗಿರುವ ಅಚಾತುರ್ಯಗಳು ಅಥವಾ ಮಾಡದೇ ಉಳಿದು ಹೋದ ಕಾರ್ಯಗಳು, ಹಲವು ವರ್ಷಗಳ ನಂತರವೂ ತಮ್ಮದೇ ಪರಿಣಾಮಗಳನ್ನು ಬೀರುತ್ತವೆ, ಆದರೆ ಆಗ ಕಾಲವು ಕೈ ತಪ್ಪಿ ಹೋಗಿರುತ್ತದೆ, ಯಾವುದೇ ಸಂಗತಿಯು ಮುಗಿದು ಹೋಯಿತು ಎಂದು ಭಾವಿಸಲು ಸಾಧ್ಯವಿಲ್ಲ , ಹಾಗೆ ಅಂದುಕೊಳ್ಳುವುದು ಒಳ್ಳೆಯದೂ ಅಲ್ಲ, ಬುದ್ಧಿವಂತಿಕೆಯೂ ಅಲ್ಲ.
ʼದಿ ಲಾಸ್ಟ್ ಲೈಟ್ ಆಫ್ ದಿ ಸನ್ʼ ಕೃತಿಯಲ್ಲಿ ಗಯ್ ಗಾವ್ರಿಯಲ್ನ ಹೇಳಿಕೆ.
ಯಾವುದೇ ವಿಚಾರವನ್ನು ವ್ಯಕ್ತ ಪಡಿಸುವಾಗ, ಅದರ ಹಿಂದಿನ ಇತಿಹಾಸವನ್ನು ತಿಳಿದುಕೊಳ್ಳುವುದು ಬಹು ಮುಖ್ಯವಾಗುತ್ತದೆ. ಸ್ವತಂತ್ರ ಪೂರ್ವ ಕಾಲದ ಭಾರತೀಯ ಸಮಾಜದಲ್ಲಿ, 1947ರ ವರೆಗೂ, ವೈದ್ಯಕೀಯ ವಿಶೇಷತೆಯಾದ ಮನೋರೋಗ ಚಿಕಿತ್ಸೆಯು ಕೇವಲ ಮನೋ ರೋಗ ಆಸ್ಪತ್ರೆಗಳಿಗೆ ಮೀಸಲಾಗಿತ್ತು. ಭಾರತದಂತಹ ದೊಡ್ಡ ದೇಶದಲ್ಲಿ ಸ್ವತಂತ್ರದ ಕಾಲಕ್ಕೆ ಸುಮಾರು 20 ಮನೋ ರೋಗ ಆಸ್ಪತ್ರೆಗಳು ಅಸ್ತಿತ್ವದಲ್ಲಿ ಇದ್ದವು.
ಕಳೆದ ಐವತ್ತು ವರ್ಷಗಳ ಹಿನ್ನೆಲೆಯನ್ನು ನೋಡಿದರೆ, ಪಾಶ್ಚಿಮಾತ್ಯ ದೇಶಗಳಲ್ಲಿ, ಮನೋರೋಗ ಆಸ್ಪತ್ರೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ, ನಕಾರಾತ್ಮಕ ಭಾವನೆಯೇ ಹೆಚ್ಚಾಗಿದೆ. ʼಸರಿಸೃಪಗಳಿರುವ ಕೊಳಕು, ಅಸಹ್ಯ ಅಮಾನುಷ ತಾಣʼದಂತೆ ಇವುಗಳನ್ನು ಪರಿಗಣಿಸಲಾಗಿದೆ. ಆದಕಾರಣ, ʼಅ-ಸಂಘಟೀಕರಣʼ ಕಾರ್ಯವು ಚಾಲನೆಯನ್ನು ಪಡೆದಿದ್ದು, ಬಹಳಷ್ಟು ಮನೋರೋಗ ಆಸ್ಪತ್ರೆಗಳನ್ನು ಮುಚ್ಚುವ ಕಾರ್ಯ ನಡೆದಿದೆ. ಒಂದು ಕಾಲದಲ್ಲಿ ನೂರಾರು ಮನೋರೋಗ ಆಸ್ಪತ್ರೆಗಳನ್ನು ಹೊಂದಿದ್ದ ಸಂಯುಕ್ತ ರಾಜ್ಯಗಳಲ್ಲಿ, ಸಮುದಾಯದ ಆರೋಗ್ಯ ಆರೈಕೆಯನ್ನು ಮನಗಂಡು, ಪ್ರಸಕ್ತ, ವ್ಯವಸ್ಥಿತವಾಗಿ ಬಹಳಷ್ಟು ಮನೋರೋಗ ಆಸ್ಪತ್ರೆಗಳನ್ನು ಮುಚ್ಚಲಾಗುತ್ತಿದೆ.
ಮನೋರೋಗ ಆಸ್ಪತ್ರೆಗಳು ಹೆಚ್ಚಾಗಿ ಅಮಾನುಷ, ಕ್ರೂರ ಕೃತ್ಯಗಳಿಗೆ ತಾಣವಾಗಿದ್ದವು ಎಂಬುದು ಸತ್ಯ. ಆದರೆ ಮನೋರೋಗ ಆಸ್ಪತ್ರೆಗಳನ್ನು ಮುಚ್ಚುವುದರಿಂದ ಮನೋ ರೋಗಿಗಳಿಗೆ ಬೇಕಾದ ಆರೈಕೆ ಮತ್ತು ಸಹಾಯವನ್ನು ಕಲ್ಪಿಸಲಾಗುತ್ತಿದೆಯೇ ಎಂಬುದರ ಬಗ್ಗೆ ವಿಶ್ವದೆಲ್ಲೆಡೆ ವಾದ ವಿವಾದಗಳು ನಡೆಯುತ್ತಿವೆ. ಅಮೇರಿಕಾದ್ಯಂತ ಗಂಭೀರ ಮನೋರೋಗದಿಂದ ಬಳಲುತ್ತಿರುವ ಜನರು, ನಿರಾಶ್ರಿತರು, ತಾಣಗಳಿಲ್ಲದೇ ಬೀದಿಗಳಲ್ಲಿ ಮತ್ತು ಕಾರಾಗೃಹಗಳಲ್ಲಿ ಇರುವ ಹಲವರ ಗತಿ ಏನು ಎಂಬುದೇ ಪ್ರಶ್ನೆಯಾಗಿದೆ, ಕೆಲವು ಬಾರಿ ಒಳ್ಳೆಯ ಉದ್ದೇಶದಿಂದ ಎಸಗಿದ ಕೃತ್ಯಗಳು ಅಹಿತಕರ ಪರಿಣಾಮಗಳನ್ನು ಉಂಟುಮಾಡ ಬಹುದು.
ಪ್ರಸ್ತುತ ಕೃತಿಯು, ಭಾರತೀಯ ಮನೋರೋಗ ಆಸ್ಪತ್ರೆಗಳ ಇತಿಹಾಸದ ಕಾಲಾನುಕ್ರಮಣಿಯನ್ನು ನಿರೂಪಿಸುತ್ತದೆ. ಚರಿತ್ರೆಯನ್ನು ಹುಡುಕಿದಂತೆಲ್ಲ, ಆಶ್ರಯಧಾಮಗಳ, ಆಸ್ಪತ್ರೆಗಳ ಬೃಹತ್ ಗೋಡೆಗಳ ಹಿಂದಿನ ರೋಚಕ ಕಥಾನಕಗಳು ಬೆಳಕಿಗೆ ಬಂದಿವೆ, ಹಾಗೆಯೇ ಸಮಾಜದ ದೃಷ್ಟಿಯಲ್ಲಿ ಮತಿಭ್ರಮಣೆಯ ಬಗ್ಗೆ ಇರುವ ಕಲ್ಪನೆಗಳು ಸಹ ಗೋಚರವಾಗುತ್ತವೆ.
ಸ್ವಾಗತ
ಭಾರತ ಖಂಡದಲ್ಲಿ, ಮನೋರೋಗಿಗಳ ಸಂಖ್ಯೆಯಲ್ಲಿ ಪ್ರಾದೇಶಿಕ ಅಸಮಾನತೆಯನ್ನು ತೋರುತ್ತಿರುವ 1921 ರ ಜನಗಣತಿ. ಕ್ರಿಯೇಟಿವ್ ಕಾಮನ್ಸ್ ಲೈಸೆಂಸ್ ಅಡಿಯಲ್ಲಿ, ಚಿತ್ರವನ್ನು ಪ್ರದರ್ಶಿಸಲಾಗಿದೆ.
ದೆಹಲಿಯ ಮನೋರೋಗ ಆಸ್ಪತ್ರೆಯ ಚರಿತ್ರೆಯಲ್ಲಿ, ರೋಚಕ ಕಥೆಗಳು ಅಡಗಿವೆ. ಸ್ವತಂತ್ರ ಪೂರ್ವದಲ್ಲಿ ಸ್ಥಾಪಿಸಲಾದ ದೆಹಲಿಯ ಮಾನಸಿಕ ಆಸ್ಪತ್ರೆಯು, ಈ ನಗರದ ಗೊಂದಲಮಯ ಛಿದ್ರ ಚರಿತ್ರೆಯನ್ನು ಪ್ರತಿಬಿಂಬಿಸುತ್ತದೆ. 19 ನೇ ಶತಮಾನದ ಆದಿಯಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು, 1857 ರ ವರೆಗೂ ಆಸ್ಪತ್ರೆಯು ಕಾರ್ಯಾಚರಣೆಯಲ್ಲಿತ್ತು. ʼದಂಗೆʼಯ ಕಾಲದಲ್ಲಿ ಆಸ್ಪತ್ರೆಯನ್ನು ದೋಚಲಾಯಿತು. ನಂತರ ಲಾಹೋರಿನ ಹುಚ್ಚಾಸ್ಪತ್ರೆಯೊಂದಿಗೆ ಇದನ್ನು ಸೇರಿಸಿ ಪುನಃ ಸ್ಥಾಪಿಸಲಾಯಿತು. ಶತಮಾನದ ಅಂತ್ಯದ ವೇಳೆಗೆ ಈ ಆಸ್ಪತ್ರೆಯನ್ನೂ ಮುಚ್ಚಲಾಯಿತು. ಹೊಸ ಅವತಾರವು ಕಾಣಿಸಿಕೊಂಡಿತು, ನೀತಿ ನಿರೂಪಕರು ಮತ್ತು ಆಡಳಿತ ವರ್ಗದವರು, ತಮ್ಮ ಮನಸೋ ಇಚ್ಛೆಯಂತೆ ನಿರ್ಣಯಗಳನ್ನು ತೆಗೆದುಕೊಂಡರು, ಕೊನೆಗೆ 1960 ರಲ್ಲಿ ಆಸ್ಪತ್ರೆಯನ್ನು ಪೂರ್ಣವಾಗಿ ಮುಚ್ಚಲಾಯಿತು. ಈ ಕಾಲಾವಧಿಯಲ್ಲಿ ಮನೋರೋಗದ ಬಗ್ಗೆ ಇದ್ದ ತಾತ್ಸಾರದ ಕಥೆಯು ಹಾಸುಹೊಕ್ಕಾಗಿದೆ.
1857
ʼದಂಗೆʼಯ ಕಾಲದಲ್ಲಿ ಆಸ್ಪತ್ರೆಯನ್ನು ದೋಚಲಾಯಿತು.
1860
ಲಾಹೋರ್ ಹಾಗೂ ದೆಹಲಿಯ ಆಸ್ಪತ್ರೆಯ ಆಶ್ರಯಧಾಮಗಳನ್ನು ಒಟ್ಟುಗೂಡಿಸುವ ಸಲಹೆ ನೀಡಿ, ಲಾಹೋರಿನ ಸಿವಿಲ್ ಸರ್ಜನ್, ಪಂಜಾಬ್ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತಾರೆ.
1861
ಅನಾರ್ಕಲಿ ಬಜ್ಸಾರಿನಿಂದ ಲಾಹೋರಿನ ಉಪ ನಗರ ಲೆಹ್ನ ಸಿಂಹ್ ಕಿ ಚೌನಿಗೆ ಸ್ಥಳಾಂತರವಾಗಿದ್ದ ಲಾಹೋರ್ ಲುನಾಟಿಕ್ ಅಸೈಲಂನೊಂದಿಗೆ ಆಸ್ಪತ್ರೆಯನ್ನು ವಿಲೀನ ಗೊಳಿಸಲಾಗುತ್ತದೆ, ದೆಹಲಿಯ ಆಶ್ರಯಧಾಮದಲ್ಲಿದ್ದ 61 ಆಶ್ರಮವಾಸಿಗಳನ್ನು ಲಾಹೋರಿಗೆ ಕಳಿಸಲಾಗುತ್ತದೆ. ಆಶ್ರಮವಾಸಿಗಳ ಕುಟುಂಬ ಸದಸ್ಯರು ಅವರ ಬಂಧುಗಳನ್ನು ಬೀಳ್ಕೊಟ್ಟ ಸಂದರ್ಭವು ಹೃದಯಸ್ಪರ್ಶಿಯಾಗಿತ್ತು ಎಂದು ದೆಹಲಿಯ ಅಂದಿನ ಸಿವಿಲ್ ಸರ್ಜನ್ ಡಾ. ಪೆನ್ನಿ ಬರೆದಿದ್ದಾರೆ.
1867
ದೆಹಲಿಯ ಹುಚ್ಚಾಸ್ಪತ್ರೆಯನ್ನು ಪುನಃ ತೆರೆಯಲಾಯಿತು, ಶತಮಾನದ ಅಂತ್ಯದ ವರೆಗೂ ಅದು ಕಾರ್ಯಾಚರಣೆಯಲ್ಲಿತ್ತು. ಈ ಮಧ್ಯೆ, ಇತರೆ ಚಿಕ್ಕ ಆಶ್ರಯಧಾಮಗಳನ್ನು ತೆರೆಯಲು ಚರ್ಚೆ ಮುಂದುವರೆಯುತ್ತದೆ, ಆದರೆ, ದೊಡ್ಡ ಕೇಂದ್ರೀಕೃತ ಹುಚ್ಚಾಸ್ಪತ್ರೆಯನ್ನು ಸ್ಥಾಪಿಸುವಂತೆ ಹೆಚ್ಚು ಅಭಿಪ್ರಾಯಗಳು ದೊರೆಯುತ್ತವೆ.
1900
ಹೊಸದಾಗಿ ತೆರೆಯಲಾದ ಲಾಹೋರ್ ಹುಚ್ಚಾಸ್ಪತ್ರೆಗೆ 103 ಪುರುಷ ಮತ್ತು 35 ಸ್ತ್ರೀ ರೋಗಿಗಳನ್ನು ಸ್ಥಳಾಂತರಿಸಲಾಗುತ್ತದೆ ಮತ್ತು ದೆಹಲಿಯ ಆಶ್ರಯಧಾಮವನ್ನು ಔಪಚಾರಿಕವಾಗಿ ಮುಚ್ಚಲಾಗುತ್ತದೆ.
1949
ಸಾದತ್ ಮಾಂಟೋ ಅವರ ʼತೋಬಾ ತೇಕ್ ಸಿಂಹ್ʼ ನೆನಪಿನಾರ್ಥವಾಗಿ, ಲಾಹೋರ್ ಹುಚ್ಚಾಸ್ಪತ್ರೆಯ 450 ಮುಸಲ್ಮಾನರಲ್ಲದ ಆಶ್ರಮವಾಸಿಗಳನ್ನು, ಅಮೃತಸರದ ಹೊಸ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ಅದೇ ವೇಳೆ, ಭಾರತಾದ್ಯಂತದ ವಿವಿಧ ಆಸ್ಪತ್ರೆಗಳಿಂದ 282 ಮುಸಲ್ಮಾನ ರೋಗಿಗಳನ್ನು ಲಾಹೋರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ.
1966
ದೆಹಲಿಯ ಶಾಹ್ದರಾ ದಲ್ಲಿ ಮನೋರೋಗ ಆಸ್ಪತ್ರೆಯನ್ನು ತೆರೆಯಲಾಗುತ್ತದೆ.
1993
1993 ರಲ್ಲಿ, ಆಸ್ಪತ್ರೆಯನ್ನು ʼಇಂಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ʼ ಎಂದು ಮರು-ನಾಮಕರಣ ಮಾಡಿ ಸ್ವಾಯತ್ತ ಸಂಸ್ಥೆಯ ದರ್ಜೆಯನ್ನು ನೀಡಲಾಗುತ್ತದೆ.
1931 ರಲ್ಲಿ, ಲಾಹೋರ್ ಮನೋರೋಗ ಆಸ್ಪತ್ರೆಯ ಅಧೀಕ್ಷಕರಾಗಿದ್ದ ಮೇಜರ್ ಸಿ.ಜೆ ಲಾಡ್ಜ್ ಪ್ಯಾಚ್ ಅವರು, ಅಲ್ಲಿನ ಆಶ್ರಿತರ ಜೀವನ ಕ್ರಮದಲ್ಲಿ ಉತ್ತಮವಾದ ಹಲವಾರು ಬದಲಾವಣೆಯನ್ನು ತಂದರು. ಪಂಜಾಬಿನ ಆಸ್ಪತ್ರೆಗಳ ಚರಿತ್ರೆ ಮತ್ತು ಸ್ಥಿತಿಗತಿಗಳ ಬಗ್ಗೆ, “ಎ ಕ್ರಿಟಿಕಲ್ ರೆವ್ಯೂಆಫ್ ದಿ ಪಂಜಾಬ್ ಮೆಂಟಲ್ ಹಾಸ್ಪಿಟಲ್ಸ್ 1840-1930”, ಎಂಬ ಕೃತಿಯನ್ನು ರಚಿಸಿ, ಎಲ್ಲ ವಿವರಣೆಗಳನ್ನು ದಾಖಲಿಸಿದ್ದಾರೆ.
1905 ರ ಇಟಲಿಯ ಕ್ರಾಂತಿಯ ಕಾಲದಲ್ಲಿ, ಮನೋರೋಗದ ಪ್ರಕರಣಗಳನ್ನು ದಾಖಲಿಸಿ, ಸಮುದಾಯದಲ್ಲಿ ಅಂತಹ ರೋಗಿಗಳ ಆರೈಕೆಯ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿತ್ತು ಎಂಬ ಸಕಾರಾತ್ಮಕ ಅಂಶವನ್ನು ಗಮನಿಸಿದರು. ಬಹುಶಃ, ಮನೋರೋಗಿಗಳಿಗೆ ಸಮುದಾಯ ಆರೈಕೆಯನ್ನು ನೀಡುವ ಪ್ರಪ್ರಥಮ ಪರಿಕಲ್ಪನೆ ಇದಾಗಿರ ಬಹುದು.
ರಾಜಕೀಯ ವಿಷಯಗಳು, ರೋಗಿಗಳ ಜೀವನದಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತಿದ್ದವು. 1877,[4] ರಲ್ಲಿ, ದೆಹಲಿಯ ನಿವಾಸಿಯಾದ ಶ್ರೀಮಾನ್ ಎಚ್, ಎಂಬ ಐರಿಶ್ ವ್ಯಕ್ತಿಯು, ತಾನು ಡ್ಯೂಕ್ ಆಗಿದ್ದವನು, ಆದರೆ ಬ್ರಿಟೀಷ್ ಸರ್ಕಾರವು ತನ್ನ ಸಂಬಳವನ್ನು ಕಸಿದುಕೊಂಡು ಕಿತ್ತಳೆಯನ್ನು ಕೊಳ್ಳಲು ಖರ್ಚು ಮಾಡಿದೆ ಎಂದು ಸಾರುತ್ತಾ ಬಂದನು. ಆತನು ಜಾಮಾ ಮಸೀದಿಯಲ್ಲಿ ಮುಸಲ್ಮಾನ ಧರ್ಮಕ್ಕೆ ಮತಾಂತರವಾಗಿ ಅಹ್ಮದ್ ದಿನ್ ಎಂಬ ಹೆಸರನ್ನಿಟ್ಟುಕೊಂಡನು. ತಾನು ಕಾಬುಲ್ ಗೆ ಹೋಗುತ್ತಿರುವುದಾಗಿಯೂ, ರಶ್ಶಿಯನ್ನರು ಮುಸಲ್ಮಾನರಿಗೆ ಒತ್ತಾಸರೆಯಾಗಿ ನಿಂತು ಬ್ರಿಟೀಷರನ್ನು ಕಿತ್ತೊಗೆಯಲು ಸಹಾಯಮಾಡುವರೆಂದು ಸಾರಿದನು. ಪೇಶಾವರದಲ್ಲಿ ರಶ್ಶಿಯನ್ನರನ್ನು ಭೇಟಿಯಾಗಲು ಮುಸಲ್ಮಾನರನ್ನು ಒಟ್ಟುಗೂಡಿಸ ತೊಡಗಿದನು. ಅದೇ ಹೊತ್ತಿಗೆ, ಕೆಂಪು ಕೋಟೆಯ ಸೇನಾದಳದಲ್ಲಿ ಬ್ರಿಟೀಷರು ಚಿಂತೆಯಿಂದ ಕಂಗಾಲಾಗಿದ್ದರು. ಕಿಪ್ಲಿಂಗ್ ನ “ಷಡ್ಯಂತ್ರ” ದ ಬಗ್ಗೆ ಅಥವಾ ಆಫಘಾನಿಸ್ಥಾನ ಮತ್ತು ದಕ್ಷಿಣ ಏಶಿಯಾದ ಶಕ್ತಿಗಳ ಬಗ್ಗೆ ಶ್ರೀಮಾನ್ ಎಚ್ ಗೆ ಹೆಚ್ಚಿನ ಜ್ಞಾನ ಇತ್ತೋ ಇಲ್ಲವೋ ತಿಳಿಯದು.
ಯೂರೋಪಿಯನ್ನರ ಕುಟಿಲ ತಂತ್ರಗಳು ಅಸ್ಪಷ್ಟ!
ಅವನನ್ನು ಬಂಧಿಸಿ, “ಬುದ್ಧಿವಿಕಲ” ಎಂದು ಘೋಷಿಸಲಾಯಿತು. ಇದರಿಂದಾಗಿ, ದೆಹಲಿಯಲ್ಲಿ ದಿಗ್ಭ್ರಮೆ ಮತ್ತು ಕೋಲಾಹಲ ಹರಡಿತು. ಕ್ರೈಸ್ತ ಮತದವನಾದ ʼಎಚ್ʼ ಮುಸಲ್ಮಾನ ಮತಕ್ಕೆ ಮತಾಂತರಗೊಂಡಿದ್ದ. ಹೀಗಾಗಿ ಆತನನ್ನು ಬುದ್ಧಿವಿಕಲತೆಯು ಕಾಡುತ್ತಿದೆ ಎಂದು ಘೋಷಿಸಲಾಗಿತ್ತು ಎಂಬುದು ಎಲ್ಲರ ನಂಬಿಕೆ.
ಜಾಮಾ ಮಸೀದಿಯ ಸುತ್ತ ಮುತ್ತ ಹಲವು ಪ್ರತಿಭಟನೆಗಳು ನಡೆದವು. ದೆಹಲಿಯ ಜನತೆಯನ್ನು “ಅತ್ಯಂತ ಪ್ರಚೋದಕ ವರ್ಗ” ಎಂದು ಭಾವಿಸಲಾಗಿತ್ತು, 1857 ರ ಘಟನೆಗಳು, ಈ ಭಾವನೆಯನ್ನು ಸಾಬೀತು ಮಾಡಿದ್ದವು. ಹೀಗಾಗಿ ದೆಹಲಿಯ ಮನೋರೋಗ ಆಸ್ಪತ್ರೆಯಲ್ಲಿ ಆತನನ್ನು ಇರಿಸುವುದು ಸರಿಯಲ್ಲ ಎಂದು ಆಲೋಚಿಸಲಾಯಿತು. ಅವನನ್ನು ಮುಂಬೈನ ಕೊಲಾಬಾ ದ ಆಶ್ರಯಧಾಮಕ್ಕೆ ಸ್ಥಳಾಂತರಿಸಲಾಯಿತು.( ಸಂಯುಕ್ತ ರಾಷ್ಟ್ರಗಳ ಮಾನಸಿಕ ಆಸ್ಪತ್ರೆಗಳಿಗೆ ಯೂರೋಪಿಯನ್ನ್ ರೋಗಿಗಳನ್ನು ಸ್ಥಳಾಂತರಿಸುವ ಮುನ್ನ, ಈ ಸಣ್ಣ ಆಸ್ಪತ್ರೆಯಲ್ಲಿ ಇರಿಸಲಾಗುತ್ತಿತ್ತು) . ಈ ಮನೋರೋಗ ಆಸ್ಪತ್ರೆಯ ಉಸ್ತುವಾರಿಯನ್ನು ಈಸ್ಟ್ ಇಂಡಿಯಾ ಕಂಪನಿ ವಹಿಸಿಕೊಂಡಿತ್ತು. ಕೆಲವು ಚಿಂತನೆಗಳು, ರಾಜಕೀಯ ಪ್ರಭಾವವನ್ನು ಬಿರುತ್ತವೆ ಎಂದು ಆಡಳಿತ ವರ್ಗವು ಮನಗಂಡಿತ್ತು, ಇಂತಹ ಆಲೋಚನೆಗಳಿಗೆ ಯಾವುದೇ ನಿರ್ದಿಷ್ಟವಾದ ಮೂಲವನ್ನು ಹೇಳಲಾಗುವುದಿಲ್ಲ (ಮ್ಯಾಡ್ ನೆಸ್ ಆಂಡ್ ಸ್ಯಾನಿಟಿ ಆಟ್ ದಿ ಟೈಮ್ ಆಫ್ ಇಂಡಿಯನ್ ಇಂಡಿಪೆಂಡೆಂಸ್)
ಇನ್ನೊಂದು ಪ್ರಕರಣದಲ್ಲಿ, ಒಬ್ಬ ವ್ಯಕ್ತಿಯು ಹೊಲವನ್ನು ಉಳುವಾಗ ಸಿಕ್ಕಿದ ಎಂಟು ವರ್ಷದ ಬಾಲಕಿಯನ್ನು ತೋಳಗಳ ಒಡನಾಡಿ-ಮಗು ಎಂದು ನಂಬಿ ಮನೋರೋಗ ಆಸ್ಪತ್ರೆಗೆ ತಂದು ಬಿಟ್ಟಿದ್ದನಂತೆ. ರಡ್ಯರ್ಡ್ ಕಿಪ್ಲಿಂಗ್, ಆಗ ದೆಹಲಿಯಲ್ಲಿ ಯುವ ಪತ್ರಿಕೋದ್ಯಮಿಯಾಗಿದ್ದನು, ಅವನಿಗೆ ಈ ಘಟನೆಯ ಮಾಹಿತಿ ಇತ್ತು. ಆದಕಾರಣ, ಭವಿಷ್ಯದಲ್ಲಿ ಈ ಪ್ರಸಂಗವನ್ನು ಆಧಾರವಾಗಿಟ್ಟುಕೊಂಡು ʼದಿ ಜಂಗಲ್ ಬುಕ್ʼ ರಚಿಸಿದನು.
1787 ಕ್ಕೂ ಮೊದಲು, ಕಲ್ಕತ್ತಾದಲ್ಲಿ ಒಂದು ರೀತಿಯ ಮನೋರೋಗ ಚಿಕಿತ್ಸಾಲಯವು ಅಸ್ತಿತ್ವದಲ್ಲಿತ್ತು. ಏಪ್ರಿಲ್ 3, 1787 ರ ಕಲ್ಕತ್ತಾ ವೈದ್ಯಕೀಯ ಮಂಡಳಿಯ ಕಾರ್ಯಕಲಾಪಗಳ ನಡಾವಳಿಗಳಲ್ಲಿ, ಹುಚ್ಚಾಸ್ಪತ್ರೆಯ ಉಸ್ತುವಾರಿಯಾಗಿದ್ದಂತಹ ಶಸ್ತ್ರಚಿಕಿತ್ಸಕ ಜಿ.ಎಂ.ಕೆಂಡರ್ಡೈನ್ ಅವರ ಬಗ್ಗೆ ಸ್ಮರಣೆಯು ಇದೆ. ಮೇ 24, 1787 ರ ಅದೇ ನಡಾವಳಿಗಳಲ್ಲಿ, ಯೂರೋಪಿಯನ್ ಮನೋರೋಗಿಗಳ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಶ್ರೀ ಕೆಂಡರ್ಡೈನ್ ಮೇ 19 ರಂದು ನಿಧನರಾದರು ಎಂಬ ಸಂಗತಿಯನ್ನು ಹೊಂದಿದೆ. ಮಂಡಳಿಯು, 7 ನೇ ಮೇ 1787 ರ ತನ್ನ ಪತ್ರದಲ್ಲಿ, ನಿಯಮಿತ ಆಶ್ರಯಧಾಮವನ್ನು ಸ್ಥಾಪಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು ಹಾಗೂ ಸಹಾಯಕ ಶಸ್ತ್ರಚಿಕಿತ್ಸಕ ವಿಲಿಯಂ ಡಿಕ್ ಅವರನ್ನು ಅದರ ಉಸ್ತುವಾರಿಯಾಗಿ ನೇಮಿಸಿತ್ತು. 1787 ರ ಮೇ 21 ರಂದು ಸರ್ಕಾರದಿಂದ ಬಂದ ಪತ್ರದಲ್ಲಿ ಇದನ್ನು ಅನುಮೋದಿಸಲಾಗಿತ್ತು, ಜೋನಾಥನ್ ಡಂಕನ್, ಸಹಾಯಕ ಕಾರ್ಯದರ್ಶಿಗಳು, ಸರ್ವಜನಿಕ ಇಲಾಖೆ, ಇವರ ಸಹಿಯಲ್ಲಿ. ಡಿಕ್ ಅವರನ್ನು ರೂ 200 ರ ತಿಂಗಳ ಸಂಬಳಕ್ಕೆ ನೇಮಕಗೊಳಿಸಿದ್ದರು.
“ಈ ಮನೋರೋಗ ಆಸ್ಪತ್ರೆಯ ಆಶ್ರಿತರು ಸಾಮಾನ್ಯವಾಗಿ ಸಮಾಜದ ಕೆಳ ವರ್ಗಕ್ಕೆ ಸೇರಿದವರು, ಉತ್ತಮ ವರ್ಗದ ಜನರಿಗೆ ಇರುವ ಯಾವುದೇ ಬಗೆಯ ಐಶ್ವರ್ಯ ಮತ್ತು ಸೌಕರ್ಯಗಳನ್ನು ಈ ಜನರು ತಮ್ಮ ಜೀವನದಲ್ಲಿ ಅನುಭವಿಸಿಲ್ಲ. ಅನಾರೋಗ್ಯದ ಪರಿಸ್ಥಿತಿಯಲ್ಲಿ, ಬಂಧನದಲ್ಲಿಟ್ಟು ಪೋಷಿಸುವಾಗ ,ಇಂತಹ ರೋಗಿಗಳನ್ನು ಮಾನವೀಯತೆ ಮತ್ತು ಅನುಕಂಪದಿಂದ ನೋಡಿಕೊಳ್ಳಬೇಕು.”
ಕಲಕತ್ತಾದಲ್ಲಿ ಯೋರೋಪಿಯನ್ನರ ಸರ್ಕಾರಿ ಮನೋರೋಗ ಆಸ್ಪತ್ರೆಯ ಯೋರೋಪಿಯನ್ನ್ ಆಶ್ರಿತರನ್ನು ಕುರಿತಂತೆ ವೈದ್ಯಕೀಯ ಮಂಡಳಿಯ ಅಭಿಪ್ರಾಯ.
1863 ರಲ್ಲಿ ವೈದ್ಯಕೀಯ ಇಲಾಖೆಯ ಪ್ರಧಾನ ಮಹಾ ನಿರೀಕ್ಷಕರು, ಯುರೋಪಿಯನ್ ರೋಗಿಗಳನ್ನು ಹೌಗೋಮಾಂಟ್ ಹಡಗಿನ ಮೂಲಕ ಯುರೋಪಿಗೆ ಹಿಂತಿರುಗಿ ಕರೆದೊಯ್ಯುವಂತೆ ಬಂಗಾಳ ಸರ್ಕಾರದ ಕಾರ್ಯದರ್ಶಿಗೆ ಶಿಫಾರಸ್ಸನ್ನು ಮಾಡಿದರು. ಭಾರತದಲ್ಲಿನ ಆಶ್ರಯಧಾಮಗಳಲ್ಲಿ ಸ್ಥಳದ ಕೊರತೆ ಮತ್ತು ಅತಿಯಾದ ವಸತಿ ವೆಚ್ಚವೇ ಇಂತಹ ನಿರ್ಧಾರಕ್ಕೆ ಕಾರಣ ಎಂದು ತಿಳಿಸಿದರು. ಯೂರೋಪಿಯನ್ನರು ತಮ್ಮ ದೇಶಕ್ಕೆ ತೆರಳಿದರೆ, ಅವರ ಮಾನಸಿಕ ಆರೋಗ್ಯವು ಸುಧಾರಿಸ ಬಹುದು ಎಂದು ಅವರು ಭಾವಿಸಿದ್ದರು. ಹೌಗೋಮಾಂಟ್ ಹಡಗಿನಲ್ಲಿ, ಸಂಯುಕ್ತ ರಾಷ್ಟ್ರದಿಂದ ಆಸ್ಟ್ರೇಲಿಯಾಕ್ಕೆ ಅಪರಾಧಿಗಳನ್ನು ಕರೆದೊಯ್ಯುಲಾಗುತ್ತಿತ್ತು ಮತ್ತು ಹಿಂತಿರುಗುವಾಗ ಅಲ್ಲಿಂದ ಮನೋರೋಗಿಗಳನ್ನು ಕರೆತರಲಾಗುತ್ತಿತ್ತು.
ಈ ಕೆಳಕಂಡ ದಾಖಲೆಗಳಲ್ಲಿ, ಕೆಲವು ವಿಶೇಷ ಪ್ರಕರಣಗಳಿಗೆ ಸಂಬಂಧಿಸಿದ ವಿವರಣೆಗಳು ದೊರಕಿವೆ, ಜಾನ್ ಸ್ಕಾಟ್, ರಿಚರ್ಡ್ ಸ್ಟಾವರ್ಸ್, ಎಲಿಜಾ ಮೊಯಿರ್ಸ್ ಮತ್ತು ಹೆನ್ರಿ ರೂಸ್ ಎಂಬ ರೋಗಿಗಳನ್ನು ಯುರೋಪಿಗೆ ವಾಪಸ್ಸು ಕಳುಹಿಸಲು ಶಿಫಾರಸ್ಸು ಮಾಡಿರುವುದು ಕಂಡುಬಂದಿದೆ.
ಬ್ರಿಟೀಷ್ ಪುಸ್ತಕಾಲಯದ ವತಿಯಿಂದ, ಅವರ ಕಡತ ಐ.ಓ.ಆರ್/ಎಲ್ /ಪಿಜೆ/3/1091 ಸಂ 2 ರ ಮೂಲಕ ಈ ದಾಖಲೆಗಳನ್ನು ಪ್ರದರ್ಶಿಸಲಾಗಿವೆ.
1795 ರಲ್ಲಿ, ಫೋರ್ಟ್ ಸೇಂಟ್ ಜಾರ್ಜ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಆಡಳಿತವನ್ನು ವಹಿಸಿಕೊಂಡಿದ್ದ ಈಸ್ಟ್ ಇಂಡಿಯಾ ಕಂಪನಿಯು, ಆಸ್ಪತ್ರೆ ಮಂಡಳಿಯ ಕಾರ್ಯದರ್ಶಿಯಾಗಿದ್ದ ಶಸ್ತ್ರಚಿಕಿತ್ಸಕ ಡಾ ವ್ಯಾಲೆಂಟೈನ್ ಕೊನೊಲಿ ಅವರನ್ನು, “ಮನೋವಿಕಾರದಿಂದ ಬಳಲುತ್ತಿದ್ದಂತಹ ವ್ಯಕ್ತಿಗಳಿಗಾಗಿ ಇದ್ದ ಆಶ್ರಯಧಾಮ”ದ ಉಸ್ತುವಾರಿಯಾಗಿ ನೇಮಿಸಿತು. ನಂತರ, ಶಸ್ತ್ರಚಿಕಿತ್ಸಕ ಮಾರಿಸ್ ಫಿಟ್ಜ್ ಗೆರಾಲ್ಡ್ ಗೆ, ಮತ್ತು ತದನಂತರದಲ್ಲಿ,ಡಾ ಜಾನ್ ಗೌಲ್ಡ್ ಅವರಿಗೆ ಉಸ್ತುವಾರಿ ವಹಿಸಲಾಯಿತು, ಕಾಲಾಂತರದಲ್ಲಿ, ಡಾಲ್ಟನ್ ಆಶ್ರಯಧಾಮದ ಉಸ್ತುವಾರಿಕೆ ವಹಿಸಿಕೊಂಡರು. 1807 ರಿಂದ 1815 ರ ವರೆಗೂ ಆಶ್ರಯಧಾಮದ ಉಸ್ತುವಾರಿಯಾಗಿದ್ದ ಡಾಲ್ಟನ್, ಕಟ್ಟಡ ಹಾಗೂ ಕಟ್ಟಡದ ಸುತ್ತಲಿನ ಆವರಣವನ್ನು ನವೀಕರಿಸಿದರು. 54 ಮನೋರೋಗಿಗಳನ್ನು ಹೊಂದಿದ್ದ ಈ ಸಂಸ್ಥೆಯು, “ಡಾಲ್ಟನ್ಸ್ ಮ್ಯಾಡ್ ಹೌಸ್” ಎಂದು ಖ್ಯಾತಿ ಪಡೆಯಿತು.
ಸ್ಥಳದ ಕೊರತೆಯಿಂದಾಗಿ ತೊಂದರೆಯಿಲ್ಲದ ನಾಲ್ವರು ನಿವಾಸಿಗಳನ್ನು, ಕಲವೇ ಮೈಲಿಗಳ ದೂರದಲ್ಲಿದ್ದ ರೊಯಾಪುರಂನಲ್ಲಿರುವ ಮೊನೆಗರ್ ಛತ್ರಕ್ಕೆ ಸ್ಥಳಾಂತರಿಸಲಾಗಿತ್ತು, ಕಿಲ್ಪೌಕ್ ನಲ್ಲಿರುವ ಹಳೆಯ ಎರಡು ಎದರುಬದರು ಕಟ್ಟಡಗಳನ್ನು ಬಾಡಿಗೆಗೆ ತೆಗೆದುಕೊಂಡು, ಆಶ್ರಯಧಾಮವನ್ನು ವಿಸ್ತಾರಿಸಿದ ನಂತರ, ಅವರಿಗೆ ಮರು ಆಶ್ರಯ ನೀಡಲಾಯಿತು.
ಈ ಹೊತ್ತಿಗೆ ಸರ್ಕಾರವು 1867 ರ ಜನವರಿ 7 ನೇ ದಿನಾಂಕದ ಸರ್ಕಾರಿ ಆದೇಶ ನಂ 20 (ನ್ಯಾಯಾಂಗ) ದ ಅನ್ವಯ, ಅಂದಿನ ಪುರಸಭೆಯ ಮಿತಿಯ ಹೊರಗಿದ್ದ ಲೊಕಾಕ್ಸ್ ಗಾರ್ಡನ್ಸ್ ನಲ್ಲಿ 66 ½ ಎಕರೆ ಪ್ರದೇಶದಲ್ಲಿ ಹುಚ್ಚಾಸ್ಪತ್ರೆಯನ್ನು ನಿರ್ಮಿಸಲು ಮಂಜೂರಾತಿ ನೀಡಿತು.
ಮಾನಸಿಕ ರೋಗಗಳ ಆಸ್ಪತ್ರೆಯ ಮುಂಬಾಗಿಲಿನ ಎರಡು ದೃಶ್ಯಗಳು, ಸುಮಾರು ಅರ್ಧ ಶತಕಕ್ಕೂ ಹಿಂದಿನ ಛಾಯಾಚಿತ್ರ ನೋಟ. ಛಾಯಾಚಿತ್ರ ಕೊಡುಗೆ ಸರ್ಕಾರಿ ಮಾನಸಿಕ ರೋಗಗಳ ಆಸ್ಪತ್ರೆ, ಕಿಲ್ಪೌಕ್,
1954 ರಲ್ಲಿ, ಭಾಷೆಗಳ ಆಧಾರದ ಮೇಲೆ ರಾಜ್ಯಗಳ ಮರುಸಂಘಟನೆಗೆ ಮೊದಲು, ಸುಮಾರು 170 ಕ್ರಿಮಿನಲ್ ರೋಗಿಗಳಿದ್ದರು. ಆಸ್ಪತ್ರೆಯ ಈ ಭಾಗವನ್ನು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ನಿರ್ವಹಿಸುತ್ತಿದ್ದರು, ಇದನ್ನು ಮದ್ರಾಸ್ ನ ಕೇಂದ್ರ ಕಾರಾಗೃಹದ ಬಹುತೇಕ ಅನೆಕ್ಸ್ ಎಂದು ಪರಿಗಣಿಸಲಾಗಿತ್ತು. ರೋಗಿಗಳು ತಮ್ಮ ನಾಗರಿಕ ಸವಲತ್ತುಗಳನ್ನು ಹೊಂದಿರಲಿಲ್ಲ. ಆಸ್ಪತ್ರೆಯಲ್ಲಿ ಇದ್ದ ಕೆಲವು ವಿನಾಯಿತಿಯ ವಿನಹ, ಅವರು ಇತರ ಭಾಗಗಳಿಗೆ ಪ್ರವೇಶವನ್ನು ಹೊಂದಿರಲಿಲ್ಲ. ಇದು ಆಸ್ಪತ್ರೆಯ ಪ್ರದೇಶದ ಹತ್ತನೇ ಒಂದು ಭಾಗವನ್ನು ಆಕ್ರಮಿಸಿಕೊಂಡಿತ್ತು, ಗಾಳಿಯಾಡುವ ಹಲವಾರು ವಿಭಾಗಗಳು, ಏಕ ಕೊಠಡಿಗಳು ಇದ್ದವು. ಆಸ್ಪತ್ರೆಯ ಆವರಣದ ಭೂಮಿಯು ಫಲವತ್ತಾಗಿತ್ತು, ಉತ್ತಮ ಗುಣಮಟ್ಟದ ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ಆಸ್ಪತ್ರೆಯ ಪಾಕಶಾಲೆಗೆ ಸರಬರಾಜು ಮಾಡಲಾಗುತ್ತಿತ್ತು.
ಫುಟ್ ಬಾಲ್, ರಿಂಗ್ ಟೆನ್ನಿಸ್, ಮತ್ತು ಕಬ್ಬಡಿಯಂತಹ ಹಲವಾರು ಹೊರಾಂಗಣ ಕ್ರೀಡೆಗಳು ಮತ್ತು ಕೇರಂ ಮತ್ತು ಚೆಸ್ ನಂತಹ ಒಳಾಂಗಣ ಆಟಗಳನ್ನು ಪ್ರೋತ್ಸಾಹಿಸಲಾಯಿತು. ಈ ರೋಗಿಗಳನ್ನು ತಿಂಗಳಿಗೊಮ್ಮೆ ಆಸ್ಪತ್ರೆಯ ಸಂದರ್ಶಕರು ನೋಡ ಬಹುದಾಗಿತ್ತು. ಜೂನ್ ಮತ್ತು ಡಿಸೆಂಬರ್ ತಿಂಗಳಲ್ಲಿ ಎರಡು ವಿಶೇಷ “ ಕ್ರಿಮಿನಲ್ ಸಮಿತಿಗಳು” ಆಯೋಜಿತವಾಗುತ್ತಿದ್ದವು. ಈ ಸಮಿತಿಯಲ್ಲಿ, ಕಾರಾಗೃಹ ಮಹಾ ನಿರೀಕ್ಷಕರ ಕಛೇರಿಯ ಹಿರಿಯ ಪ್ರತಿನಿಧಿಯಾಗಿ, ಸಾಮಾನ್ಯವಾಗಿ ಚೆನ್ನೈ ನ ಕೇಂದ್ರ ಕಾರಾಗೃಹದ ಅಧೀಕ್ಷಕರು ಭಾಗವಹಿಸುತ್ತಿದ್ದರು. “ವಿಚಾರಣೆಯನ್ನು ಎದುರಿಸಲು ಶಕ್ತರಾದ” ರೋಗಿಗಳನ್ನು ವಿಚಾರಣೆಗಾಗಿ ಕಳುಹಿಸಿ ಕೊಡಲಾಗುತ್ತಿತು. ಅದೇ ರೀತಿ ಜೈಲು ಶಿಕ್ಷೆಗೆ ಆದೇಶಿತರಾಗಿದ್ದ ಕೈದಿಗಳು, ಗುಣಮುಖರಾಗಿದ್ದರೆ ಅವರನ್ನು ಜೈಲಿಗೆ ಹಿಂತಿರುಗಿಸಲಾಗುತ್ತಿತು. ಇಂತಹ ರೋಗಿಗಳಿಗೆ ಅತ್ಯುತ್ತಮ ಆರೈಕೆಯನ್ನು ನೀಡಲಾಗುತ್ತಿತ್ತು ಎಂದು ಹೇಳಬಹುದು.
ಮದ್ರಾಸಿನಲ್ಲಿರುವ ಸರ್ಕಾರಿ ಮಾನಸಿಕ ರೋಗಗಳ ಆಸ್ಪತ್ರೆಯಲ್ಲಿ ನೇಯುವ ಮತ್ತು ಪುಸ್ತಕ ಹೊಲಿಸಯುವ ರೂಪದಲ್ಲಿ, ಕಾರ್ಮಿಕ ಚಿಕಿತ್ಸೆಯ ನೋಟ. ಛಾಯಾಚಿತ್ರ ಕೊಡುಗೆ ಸರ್ಕಾರಿ ಮಾನಸಿಕ ರೋಗಗಳ ಆಸ್ಪತ್ರೆ, ಕಿಲ್ಪೌಕ್.
1838 - 1847
ಬೆಂಗಳೂರು ಲುನಾಟಿಕ್ ಅಸೈಲಂ ಸ್ಥಾಪಿಸಲಾಯಿತು. ಬ್ರಿಟೀಷ್ ವೈದ್ಯಕೀಯ ಪದ್ಧತಿಯ ವೈದ್ಯ ಡಾ. ಚಾರ್ಲ್ಸ್ ಇರ್ವಿಂಗ್ ಸ್ಮಿಥ್ ಅವರು, ಬೆಂಗಳೂರಿನಲ್ಲಿ ಈ ಆಶ್ರಯಧಾಮವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
1872
ಈ ಕಟ್ಟಡದಲ್ಲಿ, 260 ರೋಗಿಗಳ ವಸತಿಗೆ ಅವಕಾಶವಿತ್ತು. ಸ್ವಲ್ಪ ಸಮಯದಲ್ಲಿಯೇ ಹೆಚ್ಚು ಹೆಚ್ಚು ಜನರು ಇಲ್ಲಿ ತಂಗಲು ಪ್ರಾರಂಭಿಸಿದರು. ಚಿಕಿತ್ಸೆಗೆ ಬರುವ ರೋಗಿಗಳಿಗಿಂತಲೂ, ಬಡ ನಿರಾಶ್ರಿತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯಕ್ಕಾಗಿ ಇಲ್ಲಿ ದಾಖಲಾಗುತ್ತಿದ್ದರು.
1914
ರೋಗಿಗಳ ಸಂಖ್ಯೆಯು ಮಿತಿಮೀರಿದಾಗ, ಮೈಸೂರಿನಿಂದ ಬೆಂಗಳೂರಿಗೆ ಆಶ್ರಯಧಾಮವನ್ನು ಸ್ಥಳಾಂತರಿಸಲು ಡಾಕ್ಟರ್ ನೊರೊನ್ಹಾ ವಿನಂತಿಸಿದರು. 1920 ರಲ್ಲಿ ಈ ಪ್ರಾರ್ಥನೆಗೆ ಅನುಮೋದನೆ ದೊರೆಯಿತು.
1925
ಬೆಂಗಳೂರಿನ ಆಶ್ರಯಧಾಮವನ್ನು ಮೈಸೂರು ಸರ್ಕಾರಿ ಮಾನಸಿಕ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಯಿತು, ಮಾನಸಿಕ ರೋಗಕ್ಕೆ ವೈದ್ಯಕೀಯ ವಿಧಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿತ್ತು.
1936 - 1937
ಆಸ್ಪತ್ರೆಯ ಕಟ್ಟಡಕ್ಕಾಗಿ, ಬೆಂಗಳೂರಿನ ಎರಡನೇ ಅತಿ ಎತ್ತರದ ಗುಡ್ಡವನ್ನು ಮಂಜೂರು ಮಾಡಲಾಗಿತ್ತು. ಅದಕ್ಕೂ ಮೊದಲು, ಅವೆನ್ಯೂ ರಸ್ತೆಯಲ್ಲಿ ಇದ್ದ ಆಸ್ಪತ್ರೆಯ ಕಟ್ಟಡದಲ್ಲಿ, ಪ್ರಸಕ್ತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯ ಕಛೇರಿಯು ಇದೆ. ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರು ಮೇ 1936 ರಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು.
1945
1945 ರಲ್ಲಿ ಸರ್ ಎ ಎಲ್ ಮುದಲಿಯಾರ್ ಮತ್ತು 1946 ರಲ್ಲಿ ಬೋರ್ ಸಮಿತಿಯ ಅಡಿಯಲ್ಲಿ, ಭಾರತೀಯ ವೈದ್ಯಕೀಯ ನೈರ್ಮಲ್ಯ ಪರಿಷತ್ತಿನ ಮಾನಸಿಕ ಆರೋಗ್ಯ ಸಲಹಾ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ, ಏಪ್ರಿಲ್ 1 , 1954 ರಂದು, ಭಾರತ ಸರ್ಕಾರವು ಅಖಿಲ ಭಾರತ ಮಾನಸಿಕ ಆರೋಗ್ಯ ಸಂಸ್ಥೆಯ ಸ್ಥಾಪನೆಗೆ ಅನುಮೋದನೆ ನೀಡಿತು.
1954
1954 ರ ಆಗಸ್ಟ್ 6, ರಂದು, ಆಗಿನ ಕೇಂದ್ರ ಆರೋಗ್ಯ ಸಚಿವೆ ರಾಜಕುಮಾರಿ ಅಮೃತ್ ಕೌರ್ ಅವರು ಎ.ಐ.ಐ.ಎಂ.ಹೆಚ್ ಅನ್ನು ಉದ್ಘಾಟಿಸಿದರು. ಡಾ. ಎಂ.ವಿ ಗೋವಿಂದಸ್ವಾಮಿ ಅವರನ್ನು 15 ಸೆಪ್ಟೆಂಬರ್ 1954 ರಂದು ನಿರ್ದೇಶಕರಾಗಿ ನೇಮಿಸಲಾಯಿತು.
1974
ಮೈಸೂರು ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಮಾನಸಿಕ ಆಸ್ಪತ್ರೆ ಮತ್ತು ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಅಖಿಲ ಭಾರತ ಮಾನಸಿಕ ಆರೋಗ್ಯ ಸಂಸ್ಥೆಯನ್ನು 27 ನೇ ಡಿಸೆಂಬರ್ 1974 ರಂದು ವಿಲೀನಗೊಳಿಸಲಾಯಿತು, ಇದರ ಪರಿಣಾಮವಾಗಿ ರಾಷ್ಟೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ರೂಪಗೊಂಡಿತು. ಅದೇ ವರ್ಷದಲ್ಲಿ ಸಮುದಾಯ ಮನೋವೈದ್ಯಕೀಯ ಘಟಕವನ್ನು ಸಹ ಪ್ರಾರಂಭಿಸಲಾಯಿತು.
“1838 ರಲ್ಲಿ, ಆಯುಕ್ತರ ಅನುಮೋದನೆಯೊಂದಿಗೆ, ಸ್ಥಳೀಯ ಪುರುಷ ಮನೋರೋಗಿಗಳಿಗಾಗಿ ಒಂದು ವಾರ್ಡನ್ನು ತೆರೆದೆ, ಒಂದು ವರ್ಷದ ನಂತರ ಮಹಿಳಾ ಮನೋರೋಗಿಗಳಿಗಾಗಿ ಇನ್ನೊಂದು ವಾರ್ಡನ್ನು ತೆರೆದೆ. ವಿವಿಧ ಜಾತಿ ಮತ್ತು ವಯಸ್ಸಿಗೆ ಸೇರಿದ ಸುಮಾರು 30-40 ರೋಗಿಗಳಿಗೆ, ನಾನೇ ಸ್ವತಃ ಚಿಕಿತ್ಸೆ ನೀಡಿದ್ದೇನೆ. ಬಹಳವಾಗಿ ಕಂಡುಬರುತ್ತಿದ್ದ ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗದ ಮನೋರೋಗ ರೂಪ ಇದು. (…ಪಠ್ಯವು ಅಳಿಸಿದೆ). ಭಾಗಶಃ ಪಾರ್ಶವವಾಯುವಿನ ಜೊತೆಗೆ ಮೆದುಳಿನ ಊತದಿಂದಾಗಿ ಪರಿಣಮಿಸುತ್ತಿದ್ದ ಸ್ಥಿತಿ… ವಯಕ್ತಿಕವಾಗಿ ಒಬ್ಬರನ್ನೇ ಇರಿಸುತ್ತಿರಲ್ಲಿ, ಶೀತಲ ಕಾಪಟ ನೀಡುತ್ತಿದ್ದೆವು, ಅತಿಯಾದ ಸಾರಾಯಿ ಮತ್ತು ಮಾದಕವಸ್ತು ಸೇವನೆ, ಮಿತಿಮೀರಿದ ಲೈಂಗಿಕ ಕೃತ್ಯಗಳು, ಅತಿಯಾದ ಬಿಸಿಲಿನ ಬೇಗೆ ಇಂತಹುದರ ಧೀರ್ಘಕಾಲಿಕ ಪರಿಣಾಮದಿಂದಾಗಿ ಜನರು ಈ ಮನೋರೋಗಕ್ಕೆ ಬಲಿಯಾಗುತ್ತಿದ್ದರು. ಚಿಕಿತ್ಸೆಯ ನಂತರ, ನರ ಮಂಡಲವು ತಕ್ಕ ಮಟ್ಟಿಗೆ ಸರಿಹೋದಂತಹ ಹಲವು ಸಂದರ್ಭಗಳನ್ನು ನಾನು ನೋಡಿದ್ದೇನೆ.”
ಡಾ. ಫ್ರಾಂಕ್ ಜ್ಸೇವಿಯರ್ ನರೋನ್ಹಾ ಅವರು ಮಾನಸಿಕ ಆಸ್ಪತ್ರೆಯ ಮೊದಲ ಅಧೀಕ್ಷಕರಾದರು. ಈ ಸಮಯದಲ್ಲಿ, ಸರ್ ಮಿರ್ಜ್ಸಾ ಇಸ್ಮೈಲ್ ಅವರು, ಮೈಸೂರಿನ ದೀವಾನರಾಗಿದ್ದರು. ಈ ಕಾಲವನ್ನು ಮೈಸೂರಿನ ಸುವರ್ಣ ಯುಗವೆಂದೇ ಗುರುತಿಸಲಾಗುತ್ತದೆ. ಡಾ.ನರೋನ್ಹಾ ಮತ್ತು ಸರ್ ಇಸ್ಮೈಲ್, ಇಬ್ಬರೂ ತೋಟಗಾರಿಕೆ ಮತ್ತು ಉದ್ಯಾನವನಗಳಲ್ಲಿ ಬಹಳವಾಗಿ ಆಸಕ್ತಿ ಹೊಂದಿದ್ದರು. ಪುರ ವಿನ್ಯಾಸದ ಬಗೆಗೆ ಇವರಿಬ್ಬರಿಗೂ ಇದ್ದಂತಹ ಸಮಾನ ಮನಸ್ಥಿತಿಯು, ಅಂದವಾದ ತೋಟ ಮತ್ತು ಹಸಿರಿನಿಂದ ಕೂಡಿದ ಆವರಣವಿರುವ ಮನೋರೋಗ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣಕ್ಕೆ ನಾಂದಿಯಾಯಿತು. ಇಬ್ಬರೂ ವಯಕ್ತಿಕವಾಗಿ ಕೆಲವು ವಿಶೇಷ ಬಗೆಯ ಮರಗಳನ್ನು ಈ ಆವರಣದಲ್ಲಿ ಬೆಳೆಸಿದ್ದಾರೆ. ಅವುಗಳನ್ನು ಇಂದಿಗೂ ಕಾಣಬಹುದು.
ಮೈಸೂರು ಸರ್ಕಾರಿ ಮನೋರೋಗ ಆಸ್ಪತ್ರೆಯ ಹುಲ್ಲುಹಾಸಿನ ದೃಶ್ಯ. ಛಾಯಾಚಿತ್ರ ಕೊಡುಗೆ: ನಿಮ್ಹಾನ್ಸ್ ವಸ್ತು ಸಂಗ್ರಹಾಲಯ.
1942 ರಲ್ಲಿ, ಭಾರತದಲ್ಲಿ ಮೊದಲ ಬಾರಿಗೆ ಲೋಬೋಟೊಮಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಯಿತು. ಮೆದುಳಿನ ಮುಂದಿನ ಭಾಗವನ್ನು ಕತ್ತರಿಸಿ ತೆರೆದು, ನಯವಾದ ಬೌದ್ಧಿಕ ಕಾರ್ಯಚಾಲನೆಯನ್ನು ಪರೀಕ್ಷಿಸಲಾಯಿತು. ಏ.ಐ.ಐ.ಎಂ.ಎಚ್ ಆಸ್ಪತ್ರೆಯ ಡಾ.ಎಂ.ವಿ.ಗೋವಿಂದಸ್ವಾಮಿ ಮತ್ತು ಡಾ.ಬಿ.ಎನ್.ಬಾಲಕೃಷ್ಣ ಅವರು ಈ ಶಸ್ತ್ರ ಚಿಕಿತ್ಸೆಯನ್ನು ಮಾಡಿದರು. “ರೋಗಿಗಳ ಭಾವಾವೇಶವನ್ನು ತಗ್ಗಿಸಿ, ಹೆಚ್ಚು ಸಭ್ಯರಾಗುವಂತೆ ಮಾಡಲಾಯಿತು,” ಎಂದು ಇಬ್ಬರೂ ವೈದ್ಯರು, 1944ರ ಭಾರತೀಯ ವೈದ್ಯಕೀಯ ರಾಜಪತ್ರದಲ್ಲಿ ಬರೆದಿದ್ದಾರೆ.
ಗೋವಿಂದಸ್ವಾಮಿ ಎಂ.ವಿ.; ಬಾಲಕೃಷ್ಣ ರಾವ್, ಬಿ.ಎನ್. (1944). ಭಾರತೀಯ ರೋಗಿಗಳಲ್ಲಿ ಮೆದುಳಿನ ಮುಂದಿನ ಭಾಗದ ಎರಡೂ ಪಕ್ಕೆಯ ಲ್ಯೂಕೋಟೊಮಿ.,243(6293), 466–468. ಡಿ.ಓ.ಐ :10.1016/S0140-6736(00) 58532-8
ಗೋವಿಂದಸ್ವಾಮಿ ಮತ್ತು ಬಾಲಕೃಷ್ಣ ರಾವ್ ಅವರು ಸೇರಿ ನಡೆಸಿದ 25 ಲೋಬೋಟೊಮಿ ಶಸ್ತ್ರ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ, ಬಹಳಷ್ಟು ರೋಗಿಗಳು ಸ್ಕೀಜ್ಸೋಫ್ರೇನಿಯಾ ರೋಗದಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.
“ಚಿಕಿತ್ಸೆ ನೀಡಿದ 25 ರೋಗಿಗಳಲ್ಲಿ, 7 ರೋಗಿಗಳು ಚೇತರಿಸಿಕೊಂಡರು, 10 ರೋಗಿಗಳಲ್ಲಿ ಯಾವುದೇ ಬದಲಾವಣೆಯು ಕಂಡು ಬರಲಿಲ್ಲ ಮತ್ತು 2 ರೋಗಿಗಳು ಕ್ಷೀಣಿಸಿದರು. ಕೆಲವು ಪ್ರಕರಣಗಳ ಹಿಂದಿನ ಚರಿತ್ರೆಯು ಹೀಗಿವೆ:
27 ವರ್ಷದ ಕೃಷಿಕನು, ಸಾಮಾನ್ಯ ಬುದ್ಧಿಶಕ್ತಿ, ಮೋಟು ದೇಹ, ಗಲಭೆ, ಭಾವಾವೇಶಕ್ಕೆ ಒಳಗಾಗಿ, ವಿನಾಶಕಾರಿಯಾಗಿ ವರ್ತಿಸುತ್ತಿದ್ದ, ಅಪರಿಚಿತ ದ್ವನಿಗಳು ಕೇಳಿ ಬರುತ್ತಿರುವಂತೆ ಭಾಸವಾಗುವುದನ್ನು ಅನುಭವಿಸುತ್ತಿದ್ದ ರೋಗಿ, ಮೂಲತಹ ದ್ವಿಧ್ರುವಿ ಅಸ್ವಸ್ಥತೆ ಮತ್ತು ಅದರಿಂದ ಪ್ರೇರಿತವಾದ ಮತಿ ಭ್ರಮಣೆಯಿಂದ ಬಳಲುತ್ತಿದ್ದ ರೋಗಿ. ಇವರ ಮೇಲೆ ಲೇಪ್ಟಜ್ಸಾಲ್ ಶಾಕ್ ಚಿಕಿತ್ಸೆಯನ್ನು ಪ್ರಯತ್ನಿಸಲಾಯಿತು, ಯಾವುದೇ ಸಕ್ರಿಯ ಪರಿಣಾಮವು ಲಭಿಸಲಿಲ್ಲ. 7 ವರ್ಷಗಳ ಕಾಲ ರೋಗದಿಂದ ಬಳಲುತ್ತಿದ್ದರು. ಶಸ್ತ್ರಚಿಕಿತ್ಸೆಯನ್ನು ಸೆಪ್ಟಂಬರ್. 21, 1942.ರಂದು ಮಾಡಲಾಯಿತು. ಚೇತರಿಸಿಕೊಂಡರು. ಒಂದು ವರ್ಷವಾದ ಮೇಲೂ ಆರೋಗ್ಯವಾಗಿದ್ದರು.
ದೈನಿಕ ಕೂಲಿ ಕಾರ್ಮಿಕ, 30 ವರ್ಷ ವಯಸ್ಸು, ಸಾಮಾನ್ಯ ಬುದ್ಧಿಶಕ್ತಿ, ಸಣಕಲು ದೇಹ, ಭಾವಾವೇಶ, ಒರಟು ಮತ್ತು ವಿನಾಶಕಾರಿ ಸ್ವಭಾವ, ಆಕ್ರಮಣಕಾರಿ ಅಭ್ಯಾಸಗಳು, ಶ್ರವ್ಯ ಮತ್ತು ದೃಶ್ಯ ಮತಿಭ್ರಮೆ ಮತ್ತು ಸಂಪರ್ಕ ವಿಹೀನ ವ್ಯಕ್ತಿತ್ವ ಹೊಂದಿದ್ದ. ಅಮೋನಿಯಮ್ ಕ್ಲೋರೈಡ್ ಮತ್ತು ಲೇಪ್ಟಜ್ಸಾಲ್ ಚಿಕಿತ್ಸೆಯಿಂದ ಯಾವುದೇ ಪರಿಣಾಮವು ಲಭಿಸಲಿಲ್ಲ. 6 ವರ್ಷಕಾಲ ಪಾರಾನಾಯ್ಡ್ ಮತಿಭ್ರಮಣೆಯಿಂದ ಬಳಲುತ್ತಿದ್ದ ವ್ಯಕ್ತಿ. ಶಸ್ತ್ರಚಿಕಿತ್ಸೆಯನ್ನು ಸೆಪ್ಟಂಬರ್. 23, 1942.ರಂದು ಮಾಡಲಾಯಿತು. ಒಂದು ವರ್ಷದ ನಂತರ ಸುಲಭವಾಗಿ ನಿಭಾಯಿಸಲು ಸಾಧ್ಯವಾದರು, ಭಾವಾವೇಶ ರಹಿತವಾಯಿತು; ಆದರೆ ಭ್ರಮೆ ವಿಭ್ರಾಂತಿಗಳು ತಪ್ಪಲಿಲ್ಲ.
ಒಬ್ಬರು ಕಾಂಪೌಂಡರ್, 34 ವರ್ಷ ವಯಸ್ಸು, ಸಣಕಲು ದೇಹ, ಒರಟು ಮತ್ತು ವಿನಾಶಕಾರಿ ಸ್ವಭಾವ, ಆಕ್ರಮಣಕಾರಿ ಅಭ್ಯಾಸಗಳು, ಅನೈಚ್ಛಿಕ ಚಟುವಟಿಕೆಗಳು, ಭ್ರಮೆ, ವಿಭ್ರಾಂತಿ, ಮತಿಭ್ರಮೆ ಮತ್ತು ಸಂಪರ್ಕ ವಿಹೀನತೆ, ಕ್ಷೀಣಿಸುತ್ತಿರುವ ನರಗಳು ಮತ್ತು ಅಲೆಮಾರಿತನಕ್ಕೆ ಗುರಿಯಾಗಿದ್ದರು. ಶಾಕ್ ಥೆರಪಿಯಿಂದ ಯಾವುದೇ ಪರಿಣಾಮವಾಗಲಿಲ್ಲ; 7 ವರ್ಷಕಾಲ ರೋಗದಿಂದ ಬಳಲುತ್ತಿದ್ದ ವ್ಯಕ್ತಿ. ಶಸ್ತ್ರಚಿಕಿತ್ಸೆಯನ್ನು ಅಕ್ಟೋಬರ್. 12, 1942.ರಂದು ಮಾಡಲಾಯಿತು. 10 ತಿಂಗಳ ನಂತರವೂ ಯಾವುದೇ ಬದಲಾವಣೆಯು ಕಾಣಲಿಲ್ಲ.
ಪ್ರೌಢ ಶಾಲೆಯ ವಿದ್ಯಾರ್ಥಿ, 24 ವರ್ಷ ವಯಸ್ಸು, ಸಾಮಾನ್ಯ ಬುದ್ಧಿಶಕ್ತಿ, ಸಣಕಲು ದೇಹ, ಭಾವಾವೇಶಕ್ಕೆ; ಕೆಟ್ಟ ಅಭ್ಯಾಸಗಳಿಗೆ ಗುರಿಯಾಗಿದ್ದು, ಶ್ರವ್ಯ ಮತ್ತು ದೃಶ್ಯ ಮತಿಭ್ರಮೆ ಮತ್ತು ಸಂಪರ್ಕ ವಿಹೀನತೆಯನ್ನು ಅನುಭವಿಸುತ್ತಿದ್ದ ರೋಗಿ. ಪಾರಾನಾಯ್ಡ್ ಮತಿಭ್ರಮಣೆಯಿಂದ ಬಳಲುತ್ತಿದ್ದ ವ್ಯಕ್ತಿ. ಅಮೋನಿಯಮ್ ಕ್ಲೋರೈಡ್, ಇಂಸುಲಿನ್ ಮತ್ತು ಲೇಪ್ಟಜ್ಸಾಲ್ ಚಿಕಿತ್ಸೆಯಿಂದ ಯಾವುದೇ ಪರಿಣಾಮವು ಲಭಿಸಲಿಲ್ಲ. ಇತರರ ಮೇಲೆ ಹಲ್ಲೆ ಮಾಡುವ ಚರಿತ್ರೆಯನ್ನು ಹೊಂದಿದ್ದ. ಮೂರು ವರ್ಷಗಳ ಕಾಲ ರೋಗದಿಂದ ಬಳಲುತ್ತಿದ್ದ ವ್ಯಕ್ತಿ.. ಶಸ್ತ್ರಚಿಕಿತ್ಸೆಯನ್ನು ಮಾರ್ಚ್. 25, 1943. ರಂದು ಮಾಡಲಾಯಿತು. 6 ತಿಂಗಳ ನಂತರ, ಪ್ರಜ್ಞೆಯು ಸರಿಹೋಯಿತು, ಒಳ್ಳೆಯ ರೀತಿಯ ಬದಲಾವಣೆಯು ಪರಿಣಮಿಸಿತು ಆದರೆ ಮಂಕುತನ ಮತ್ತು ಖಿನ್ನತೆಗೆ ಕಾರಣವಾಯಿತು; ಎಲ್ಲದರಲ್ಲೂ ಆಸಕ್ತಿ ಕಳೆದುಹೋಗಿತ್ತು, ಹಲವು ಬಾರಿ ಪ್ರಶ್ನೆಗೆ ಗುರಿಮಾಡಿದಾಗಲೂ ಆಗಿಂದಾಗ್ಯೆ ವಿಭ್ರಾಂತಿಯು ಕಾಡುತ್ತಿತ್ತು. ಬುದ್ಧಿಶಕ್ತಿ ಸಾಮಾನ್ಯವಾಗಿ ಕ್ಷೀಣಿಸಿತ್ತು.
25 ವರ್ಷ ವಯಸ್ಸಿನ ಮಹಿಳೆ, ಉನ್ನತ ಬುದ್ಧಿ ಶಕ್ತಿ, ಮೋಟು ದೇಹ, ರೋಗಗ್ರಸ್ತ ತಲ್ಲೀನತೆ, ಭಾವಾವೇಶ, ಬೇಡದ ಆವೇಶ, ಆಕ್ರಮಣಕಾರಿ ಅಭ್ಯಾಸಗಳು, ಸ್ಪಂದನೆ ವಿಹೀನತೆ; ಇಂಸುಲಿನ್ ಮತ್ತು ಲೇಪ್ಟಜ್ಸಾಲ್ ಚಿಕಿತ್ಸೆಯಿಂದ ಯಾವುದೇ ಲಾಭದಾಯಕ ಪರಿಣಾಮವು ಲಭಿಸಲಿಲ್ಲ. ಸ್ಪಂದನೆ ವಿಹೀನ ಮತಿಭ್ರಮಣೆ ಕಾಡುತ್ತಿತ್ತು, ಶಸ್ತ್ರಚಿಕಿತ್ಸೆಯನ್ನು ಮಾರ್ಚ್ 26, 1943.ರಂದು ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಮೂರನೇ ದಿನದಿಂದಲೇ ಗಮನಾರ್ಹವಾದ ಚೆತರಿಕೆ ಕಾಣಿಸಿಕೊಂಡಿತು. ಶಸ್ತ್ರಚಿಕಿತ್ಸೆಯಾದ ಆರು ತಿಂಗಳ ನಂತರ, ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಮನೆಯ ಕೆಲಸಗಳೆಲ್ಲವನ್ನೂ ಸುಲಭವಾಗಿ ನಿಭಾಯಿಸುವಂತಾದರು.
30 ವರ್ಷ ವಯಸ್ಸಿನ ಮಹಿಳೆ, ಸಾಮಾನ್ಯ ಬುದ್ಧಿಶಕ್ತಿ, ದುರ್ಬಲ ಅನುವಂಶಿಕತೆ, ತಾಯಿ ಮತ್ತು ಒಬ್ಬ ಸಹೋದರ ಇಬ್ಬರೂ ಉನ್ಮಾದ ಖಿನ್ನತೆ ಮನೋರೋಗದಿಂದ ಬಳಲಿದವರು, ಸಣಕಲು ದೇಹ, ಕ್ಷೀಣಿಸುತ್ತಿದ್ದ ಆರೋಗ್ಯ ಸ್ಥಿತಿ, ಮುಂಚಿನ ಚಿಕಿತ್ಸೆಯಿಂದ ಯಾವುದೇ ಉಪಯೋಗ ಕಂಡು ಬಂದಿರಲಿಲ್ಲ. ಆರು ವರ್ಷಗಳಿಂದ ಬಳಲುತ್ತಿದ್ದರು. ಶಸ್ತ್ರಚಿಕಿತ್ಸೆಯನ್ನು ಮಾರ್ಚ್ 26, 1943.ರಂದು ಮಾಡಲಾಯಿತು; ಯಾವುದೇ ರೀತಿಯಲ್ಲೂ ಸುಧಾರಣೆ ಕಾಣಲಿಲ್ಲ.
30 ವರ್ಷ ವಯಸ್ಸಿನ ಮಹಿಳೆ, ಕುಳ್ಳ ದಢೂತಿ ಕಾಯ, ಸಾಮಾನ್ಯ ಬುದ್ಧಿಶಕ್ತಿ, ದುರ್ಬಲ ಅನುವಂಶಿಕತೆ, ಉನ್ಮಾದ ಖಿನ್ನತೆಯಿಂದ ಬಳಲಿದ ತಂದೆ, ತಾಯಿ ಹಿಂದುಳಿದವರು. ಪ್ರಸ್ತುತ ರೋಗ ಲಕ್ಷಣವು ಮೂರನೇ ಬಾರಿಗೆ ಕಾಣಿಸಿಕೊಂಡ ಅತಿ ತೀವ್ರ ಮತಿ ಭ್ರಮಣೆ ಪ್ರಕರಣ, ಎಲ್ಲ ವೇಳೆಯೂ ಪ್ರಸೂತಿಯ ಸಮಯದಲ್ಲಿ ಇಂತಹ ರೋಗ ಲಕ್ಷಣವು ಕಾಣಿಸಿಕೊಂಡಿದೆ. ಮೊದಲ ಎರಡು ಬಾರಿಯ ಭ್ರಮಣೆಯಿಂದ ಸ್ವಲ್ಪ ಮಟ್ಟಿಗೆ ಮಾನಸಿಕ ಆರೋಗ್ಯವು ಕುಂದಿತ್ತು. ಸಾಮಾನ್ಯ ಆರೈಕೆ ಮತ್ತು ಲೇಪ್ಟಜ್ಸಾಲ್ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಶಸ್ತ್ರ ಚಿಕಿತ್ಸೆಯ ಮೂಲಕ ಅಂಡಾಶಯದ ಕೊಳವೆಯನ್ನು ನಿಶ್ಕ್ರಿಯಗೊಳಿಸಿ ಹೊಲಿಯಲಾಗಿತ್ತು. ಮೂರು ವರ್ಷಗಳ ಹಿಂದೆ ಮೂರನೇ ಬಾರಿಗೆ ಮತಿಭ್ರಮಣೆಯು ಕಾಣಿಸಿಕೊಂಡಿದೆ. ಮೇ. 23, 1943 ರಂದು ಮೆದುಳಿನ ಮುಂದಿನ ಭಾಗದಲ್ಲಿ ಲ್ಯೂಕೋಟೊಮಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಯಾವುದೇ ರೀತಿಯಲ್ಲೂ ಸುಧಾರಣೆ ಕಂಡು ಬಂದಿಲ್ಲ. ಬೇಸರಿಕೆ ಮತ್ತು ಖಿನ್ನತೆಯು ಮುಂದುವರಿದಿದೆ. ಆಕ್ರಮಣಕಾರಿ ವ್ಯಕ್ತಿತ್ವ ಮತ್ತು ಅರ್ಥವಿಲ್ಲದ ಉನ್ಮಾದತೆಯು ಕೆಲವೊಮ್ಮೆ ಕಾಡುತ್ತದೆ.”
ಅಭಿಪ್ರಾಯ: ”ನಮ್ಮ ಅನುಭವದಿಂದ, ಲ್ಯೂಕೋಟೊಮಿ ಒಂದು ಉಪಯೋಗಿ ಚಿಕಿತ್ಸಾ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ ಶಾಕ್ ಚಿಕಿತ್ಸೆಯು ಫಲಕಾರಿಯಾಗದಿದ್ದರೆ ಅಂತಹ ರೋಗಿಗಳ ಮೇಲೆ ಪ್ರಯೋಗಿಸ ಬಹುದಾದ ಚಿಕಿತ್ಸಾ ಕ್ರಮ. ಹೆಚ್ಚು ಅನುಭವ, ಹಾಗೂ ಪಠ್ಯ ಸಾಮಗ್ರಿಗಳ ಆಧಾರದ ಮೇಲೆ, ಲ್ಯೂಕೋಟೊಮಿ ಪ್ರಕ್ರಿಯೆಯನ್ನು ಉತ್ತಮವಾಗಿ ಅರಿಯ ಬಹುದು.”
ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ, ರಾಂಚಿಯಲ್ಲಿರುವ ಬರ್ಕ್ಲಿ-ಹಿಲ್ ವಾರ್ಡ್, ಬ್ಲೂಲರ್ ವಾರ್ಡ್ ಮತ್ತು ಫ್ರೂಯಿಡ್ ವಾರ್ಡ್. ನಿಮ್ಹಾನ್ಸ್ ವಸ್ತುಸಂಗ್ರಹಾಲಯದಿಂದ ಒದಗಿಸಲಾದ ಛಾಯಾಚಿತ್ರಗಳು.
ಭಾರತದ ಪೂರ್ವ ಭಾಗದಲ್ಲಿರುವ ರಾಂಚಿ ನಗರವು 1930 ರ ದಶಕದಲ್ಲಿ, ಆಹ್ಲಾದಕರ ವಾತಾವರಣವನ್ನು ಹೊಂದಿತ್ತು. ಎರಡು ದೊಡ್ಡ ಮನೋರೋಗ ಆಸ್ಪತ್ರೆಗಳನ್ನು ಮುಖಾಮುಖಿಯಾಗಿ ಕಟ್ಟಲಾಗಿತ್ತು. ಯುರೋಪಿಯನ್ನರಿಗಾಗಿ ಮೀಸಲಿದ್ದ ಆಸ್ಪತ್ರೆಯನ್ನು, ಇಂಪೀರಿಯಲ್ ಸರ್ಕಾರದ ಆಡಳಿತದಲ್ಲಿ, ಲೆಫ್ಟಿನೆಂಟ್ ಕರ್ನಲ್ ಓವನ್ ಬರ್ಕ್ಲಿ-ಹಿಲ್ ನಿರ್ವಹಿಸುತ್ತಿದ್ದರು, ಬಂಗಾಳ ಪ್ರೆಸಿಡೆನ್ಸಿಯ ಆಡಳಿತದಲ್ಲಿದ್ದ ಭಾರತೀಯ ಮನೋ ರೋಗ ಆಸ್ಪತ್ರೆಯನ್ನು, ಬಾಂಬೆಯವರಾದ, ಪಾರ್ಸಿ ವರ್ಗಕ್ಕೆ ಸೇರಿದ ಮೇಜರ್ ಜಾಲ್ ಧುಂಜಿಭೋಯ್ ನಿರ್ವಹಿಸುತ್ತಿದ್ದರು.
ಇಬ್ಬರೂ ಒಳ್ಳೆಯ ಬರಹಗಾರರು, ಬಹಳಷ್ಟು ಪ್ರಯಾಣ ಮಾಡಿದಂತಹವರು, ಹಠವಾದಿಗಳು. ಅವರ ಜೀವನ ಮತ್ತು ಕಾರ್ಯಗಳು ರಾಂಚಿಯಲ್ಲಿ ಈ ಸಮಯದಲ್ಲಿನ ಎರಡೂ ಮಾನಸಿಕ ಆಸ್ಪತ್ರೆಗಳ ಹಲವು ಒಳನೋಟಗಳನ್ನು ನೀಡುತ್ತವೆ. ಎರಡೂ ಆಸ್ಪತ್ರೆಗಳು ಇಂದು ವಿಭಿನ್ನ ಸಂಸ್ಥೆಗಳಾಗಿ ಮುಂದುವರಿದಿವೆ: ಯುರೋಪಿಯನ್ ಮಾನಸಿಕ ಆಸ್ಪತ್ರೆಯು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ ( ಸಿ ಐ ಪಿ) ಆಗಿ ಮಾರ್ಪಟ್ಟಿದೆ ಮತ್ತು ಭಾರತೀಯ ಮಾನಸಿಕ ಆಸ್ಪತ್ರೆಯನ್ನು ಈಗ ರಾಂಚಿ ಇನ್ಸ್ಟಿಟ್ಯೂಟ್ ಆಫ್ ನ್ಯೂರೋ-ಸೈಕಿಯಾಟ್ರಿ ಅಂಡ್ ಅಲೈಡ್ ಸೈನ್ಸಸ್ ( ಆರ್ ಐ ಎನ್ ಪಿ ಎ ಸ್) ಎಂದು ಕರೆಯಲಾಗುತ್ತದೆ.
“ಮಾನಸಿಕ ರೋಗಗಳಲ್ಲಿ, ಸ್ವತಃ ರೋಗಿಯು ಚಿಕಿತ್ಸೆಗೆ ಒಳಪಟ್ಟಿರುತ್ತಾರೆ, ರೋಗಿಯ ಶರೀರದ ಅಂಗಗಳಲ್ಲ, ಆದ್ದರಿಂದ ವ್ಯಕ್ತಿಗತ ಅಂಶಗಳು ಮುಖ್ಯವಾಗುತ್ತವೆ.
ರೋಗಿಯ ಅಸಹಜ ಅನುಭವಗಳನ್ನು ನಿಜವೆಂದು ತಾತ್ಕಾಲಿಕವಾಗಿ ಸ್ವೀಕರಿಸಿ, ರೋಗಿಯ ದೃಷ್ಟಿಯಿಂದ ಲೋಕವನ್ನು ನೋಡುವ ಪ್ರಯತ್ನವನ್ನು ಮಾಡಬೇಕು ಮತ್ತು ರೋಗಿಯ ಕಷ್ಟಗಳಲ್ಲಿ ಅವರೊಂದಿಗೆ ನಿಲ್ಲಬೇಕು.”
ಮೇಜರ್ ಜೆ ಇ ಧುಂಜಿಭೋಯ್
ವಾರ್ಷಿಕ ವರದಿ, 1934
ಭಾರತೀಯ ವೈದ್ಯಕೀಯ ಸೇವೆಯಲ್ಲಿ ಮೊದಲ ಭಾರತೀಯರಲ್ಲಿ ಒಬ್ಬರಾದ ಧುಂಜಿಭೋಯ್ ಅವರು ಬಾಂಬೆ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆದಿದ್ದರು ಮತ್ತು ಕಾಲೇಜ್ ಆಫ್ ಫಿಜ್ಸಿಶಿಯನ್ಸ್ ಆಂಡ್ ಸರ್ಜನ್ಸ್ ಸಂಸ್ಥೆಯಲ್ಲಿ ಫೆಲೋ ಆಗಿದ್ದರು. ಭಾರತೀಯ ವೈದ್ಯಕೀಯ ಸೇವೆಗೆ ನೇಮಕಗೊಂಡ ಆರಂಭದಲ್ಲಿ, ಅವರನ್ನು ಬರ್ಹಾಂಪೋರ್ ಮಾನಸಿಕ ಆಸ್ಪತ್ರೆಗೆ ನೇಮಕಾತಿ ಮಾಡಲಾಯಿತು ನಂತರ ರಾಂಚಿಯ ಕಾಂಕೆಯಲ್ಲಿ ಹೊಸದಾಗಿ ನಿರ್ಮಿಸಲಾದ ಸಂಸ್ಥೆಯ ಮೊದಲ ಅಧೀಕ್ಷಕರಾಗಿ ನೇಮಕಗೊಂಡರು. ಧುಂಜಿಭೋಯ್ ಅವರು 1947 ರಲ್ಲಿ ಇಂಡಿಯನ್ ಸೈಕಿಯಾಟ್ರಿಕ್ ಸೋಸೈಟಿಯ ಮೊದಲ ಅಧೀಕ್ಷಕರಾದರು, ಆದರೆ ಸ್ವಾತಂತ್ರ್ಯದ ನಂತರ ಕರಾಚಿಯಲ್ಲಿ ಉಳಿಯಲು ನಿರ್ಧರಿಸಿದರು.
“ನಾನು ಒಂದು ವಿಷಯವನ್ನು ಹೇಳಲೇಬೇಕು. ಚಿಕ್ಕವನಾಗಿದ್ದಾಗ ನಾನು ಗಮನಿಸಿದಂತೆ, ನನ್ನ ತಂದೆಯು ಬಹಳ ಕ್ರಿಯಾಶೀಲರಾಗಿದ್ದರು. ರೋಗಿಗಳ ಜೀವನವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿದ್ದರು. ಚಲನಚಿತ್ರವನ್ನು ತೋರಿಸುವ ಸೌಕರ್ಯ ಮಾಡಿಕೊಟ್ಟರು, ಕ್ರೀಡಾ ದಿನಗಳನ್ನು ಆಚರಿಸುತ್ತಿದ್ದರು, ರೋಗಿಗಳನ್ನು ಉದ್ಯೋಗಗಳಲ್ಲಿ ತೊಡಗಿಸಿ ಚಿಕಿತ್ಸೆ ನೀಡಲು ಮತ್ತು ಅವರ ಬೇಸರಿಕೆಯನ್ನು ಹೋಗಲಾಡಿಸಲು ಮುಂದಾದರು. ಅವರು ಅನೇಕ ಹೊಸ ವೈಜ್ಞಾನಿಕ ವಿಚಾರಗಳನ್ನು ಪರಿಚಯಿಸಿದರು ಮತ್ತು ಎಲೆಕ್ಟ್ರೋ ಶಾಕ್ ಗಳನ್ನು (ಭಯಾನಕ) ಪ್ರಯತ್ನಿಸಿದವರಲ್ಲಿ ಮೊದಲಿಗರಾಗಿದ್ದರು. ಅವರು ತಮ್ಮ ಕುಟುಂಬಕ್ಕಿಂತಲೂ ಹೆಚ್ಚಾಗಿ ಆಸ್ಪತ್ರೆಯನ್ನು ಪ್ರೀತಿಸುತ್ತಿದ್ದರು ಎಂದು ನಾನು ಭಾವಿಸುತ್ತೇನೆ“.
ರೋಶನ್ ಧುಂಜಿಭೋಯ್ (ಸ್ವಂತ ಅಭಿಪ್ರಾಯ)
“ಮನೋರೋಗಿಗಳ ಬಗ್ಗೆ ಯಾರಿಗೂ ಸಾಕಷ್ಟು ವಿಷಯ ಗೊತ್ತಿರುವುದಿಲ್ಲ, ರೋಗಿಗಳ ವಯಕ್ತಿಕ ಚರಿತ್ರೆ ಮತ್ತು ವರ್ತಮಾನದ ಪರಿಸ್ಥಿತಿಗಳನ್ನು ಗಮನವಿಟ್ಟು ಅಧ್ಯಯನ ಮಾಡಬೇಕಾಗುತ್ತದೆ. ರೋಗಿಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದರೆ ಮಾತ್ರವೇ ಅವರೊಂದಿಗೆ ವ್ಯವಹರಿಸುವಾಗ ತಪ್ಪುಗಳನ್ನು ತಡೆಯ ಬಹುದು.”
ಓವನ್ ಬರ್ಕ್ಲಿ-ಹಿಲ್
ಆಲ್ ಟೂ ಹ್ಯೂಮನ್ (ಆತ್ಮಚರಿತ್ರೆ)
ಲೆಫ್ಟಿನೆಂಟ್ ಕರ್ನಲ್ ಓವನ್ ಬರ್ಕ್ಲಿ-ಹಿಲ್, ರಾಂಚಿಯ ಯುರೋಪಿಯನ್ ಮಾನಸಿಕ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಆಗಿದ್ದರು. ಇವರ ಪೂರ್ವಜರು, ಬ್ರಿಟನ್ನಿನ ಪ್ರಖ್ಯಾತ ಶಿಕ್ಷಣತಜ್ಞರಾಗಿದ್ದರು. ಓವನ್ ಬರ್ಕ್ಲಿ-ಹಿಲ್, ಸಮೃದ್ಧ ಬರಹಗಾರರಾಗಿದ್ದರು, ಮಲಬದ್ಧತೆಯಿಂದ ಹಿಡಿದು ನೀರೆಯರ ಸೀರೆಯ ವರೆಗೆ ವಿವಿಧ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರು. ಅವುಗಳಲ್ಲಿ ಯಾವುದಕ್ಕೂ ಧ್ವನಿ ನೀಡಲು ಹಿಂಜರಿಯುತ್ತಿರಲಿಲ್ಲ.
ಬರ್ಕ್ಲಿ-ಹಿಲ್ ಅವರು ದಾಖಲೆಗಳನ್ನು, ಶೈಕ್ಷಣಿಕ ಸಾಮಗ್ರಿಗಳನ್ನು ಮತ್ತು ಚಿಂತನೆಗಳನ್ನು ವಿಸ್ಥಾರವಾಗಿ ಬರೆಯುತ್ತಿದ್ದರು. ಅವರು ಕರಾವಳಿಯ ಕೇರಳದ ಕನ್ನನೋರ್ ನಗರದ ಕರಿಂಬಿಲ್ ಕುಂಹಿಮನ್ನಿ ಅವರನ್ನು ವಿವಾಹವಾದರು.
ಲೆಫ್ಟಿನಂಟ್ ಕರ್ನಲ್ ಓವನ್ ಬರ್ಕ್ಲಿ-ಹಿಲ್, ಅವರ ಪ್ರಕಟಣೆಗಳು. ಛಾಯಾಚಿತ್ರ ಕೊಡುಗೆ: ಓವನ್ ಬರ್ಕ್ಲಿ-ಹಿಲ್
“ಅಕ್ಟೋಬರ್ ರಲ್ಲಿ ನಾನು ಆಡಳಿತವನ್ನು ವಹಿಸಿಕೊಂಡಾಗ, ಶೋಚನೀಯ ಸ್ಥಿತಿಯಲ್ಲಿದ್ದ ಕರಡಿ-ಉದ್ಯಾನವನವು, ಏಶಿಯಾದಲ್ಲಿಯೇ ಅತಿ ಉತ್ತಮವಾದ ಆಸ್ಪತ್ರೆಯಾಗಿ ರೂಪಗೊಂಡಿದೆ, ಯೂರೋಪಿನ ಬಹಳಷ್ಟು ಮನೋರೋಗ ಆಸ್ಪತ್ರೆಗಳಿಗಿಂತಲೂ ಉತ್ಕೃಷ್ಟವಾಗಿದೆ.”
ಓವನ್ ಬರ್ಕ್ಲಿ-ಹಿಲ್
ಆಲ್ ಟೂ ಹ್ಯೂಮನ್ (ಆತ್ಮಚರಿತ್ರೆ)
210 ಎಕರೆಯಲ್ಲಿ ಕಟ್ಟಿರುವ ಯುರೋಪಿಯನ್ ಮಾನಸಿಕ ಆಸ್ಪತ್ರೆಯು 1948 ರಲ್ಲಿ ಅಂತರ-ಪ್ರಾಂತೀಯ ಮಾನಸಿಕ ಆಸ್ಪತ್ರೆಯಾಗಿ ಮಾರ್ಪಟ್ಟಿತು, ನಂತರ 1952 ರಲ್ಲಿ ಮಾನಸಿಕ ರೋಗಗಳ ಆಸ್ಪತ್ರೆಯಾಯಿತು. 1977 ರಲ್ಲಿ ಈ ಆಸ್ಪತ್ರೆಯ ಆಡಳಿತವನ್ನು ಭಾರತ ಸರ್ಕಾರವು ವಹಿಸಿಕೊಂಡಿತು. ಪ್ರಸಕ್ತ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ(ಸಿ.ಐ.ಪಿ) ಎಂದು ಹೆಸರು ಪಡೆದಿದೆ.
ಬರ್ಕ್ಲಿ-ಹಿಲ್ 1834 ರಲ್ಲಿ ನಿವೃತ್ತರಾದರು ಮತ್ತು ರಾಂಚಿಯ ಹೊರವಲಯದಲ್ಲಿರುವ ತತ್ಸಿಲ್ವೈಗೆ ತೆರಳಿದರು. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ, ಬ್ರಿಟೀಷರು ಎಂಬ ಕಾರಣಕ್ಕೆ ಇವರ ಮೇಲೆ ಹಲ್ಲೆ ನಡೆದರೂ ಅಲ್ಲಿಂದ ಸ್ಥಳಾಂತರವಾಗಲಿಲ್ಲ. ಅವರು 1944 ರಲ್ಲಿ ಅನಾರೋಗ್ಯದ ಕಾರಣ ನಿಧನರಾದರು.